ಬಿಹಾರ : ಶುಕ್ರವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ದೊಡ್ಡ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಅವರು 11 ಎಸೆತಗಳಲ್ಲಿ 15 ರನ್ ಗಳಿಸಿ ಪವರ್ಪ್ಲೇನ ಕೊನೆಯ ಓವರ್ನಲ್ಲಿ ಔಟಾದರು. ತಮ್ಮ ಚೊಚ್ಚಲ ಐಪಿಎಲ್ ಸೀಸನ್ ಆಡುತ್ತಿರುವ ಸಾಕಿಬ್ ಹುಸೇನ್ ಅವರು ಕೊಹ್ಲಿ ವಿಕೆಟ್ ಪಡೆದರು. ಪಂದ್ಯದ ನಂತರ ಮಾತನಾಡಿದ ಸಾಕಿಬ್, ಈ ವಿಕೆಟ್ ತಮಗೆ ಒಂದು ಕನಸಿನಂತಿತ್ತು ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್ಗಳ ಜಯ ಸಾಧಿಸಿತು.
ಬಿಹಾರದ ಗೋಪಾಲಗಂಜ್ ಮೂಲದ ಸಾಕಿಬ್ ಹುಸೇನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2026 ಗಾಗಿ 30 ಲಕ್ಷ ರೂಪಾಯಿಗೆ ಖರೀದಿಸಿತ್ತು. ಇದಕ್ಕೂ ಮುನ್ನ 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಇವರನ್ನು ಖರೀದಿಸಿತ್ತಾದರೂ, ಅವರಿಗೆ ಪದಾರ್ಪಣೆ ಮಾಡಲು (ಡೆಬ್ಯೂ) ಅವಕಾಶ ಸಿಕ್ಕಿರಲಿಲ್ಲ. ಈ ಸೀಸನ್ ಸಾಕಿಬ್ ಅವರ ಚೊಚ್ಚಲ ಸೀಸನ್ ಆಗಿದ್ದು, ತಮ್ಮ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಭರ್ಜರಿ ಆರಂಭ ದಾಖಲಿಸಿದ್ದರು. ಈಗ ಶುಕ್ರವಾರದ ಪಂದ್ಯದಲ್ಲಿ ಅತ್ಯುತ್ತಮ ಎಸೆತವೊಂದರ ಮೂಲಕ ವಿರಾಟ್ ಕೊಹ್ಲಿ ಅವರ ವಿಕೆಟ್ ಉರುಳಿಸಿದ್ದಾರೆ.
ಸಾಕಿಬ್ ಹೇಳಿದ್ದೇನು?
“ಪಿಚ್ಗೆ ಅನುಗುಣವಾಗಿ ಬೌಲಿಂಗ್ ಮಾಡುವ ಯೋಜನೆ ಇತ್ತು. ವರುಣ್ ಭಾಯ್ (ವರುಣ್ ಆರೋನ್, SRH ಬೌಲಿಂಗ್ ಕೋಚ್) ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಲು ಹೇಳಿದರು. ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯುವುದು ನನಗೆ ಒಂದು ಕನಸಿನಂತಿತ್ತು” ಎಂದು ಪಂದ್ಯದ ಬಳಿಕ ಸಾಕಿಬ್ ಹುಸೇನ್ ತಿಳಿಸಿದ್ದಾರೆ.
ಪಂದ್ಯದ ವಿವರ
ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟವಾಡಿದ್ದರು, ಇದರಲ್ಲಿ ಅಯ್ಯರ್ ಅವರ ಕೊಡುಗೆಯೇ 44 ರನ್ಗಳಾಗಿತ್ತು. ಕೊಹ್ಲಿ ನಿಧಾನಗತಿಯ ಆರಂಭ ಪಡೆದರೂ, ಕ್ರೀಸ್ನಲ್ಲಿ ಸೆಟ್ ಆಗಿದ್ದರು. ಸಾಕಿಬ್ ಇನಿಂಗ್ಸ್ನ 6 ನೇ ಓವರ್ ಎಸೆದರು, ಇದರಲ್ಲಿ ಅವರು ಉತ್ತಮ ನಿಧಾನಗತಿಯ (slow) ಎಸೆತಗಳನ್ನು ಹಾಕಿದರು. ರನ್ ಗಳಿಸುವ ಒತ್ತಡದಲ್ಲಿದ್ದ ಕೊಹ್ಲಿ ಅಪಾಯಕಾರಿ ಶಾಟ್ಗೆ ಕೈಹಾಕಿದರು. ಕವರ್ಸ್ ಮೇಲಿಂದ ಹೊಡೆಯಲು ಪ್ರಯತ್ನಿಸಿದಾಗ ಚೆಂಡು ನೇರವಾಗಿ ಸ್ಮರಣ್ ರವಿಚಂದ್ರನ್ ಅವರ ಕೈ ಸೇರಿತು.
ತಮ್ಮ ಯೋಜನೆಯ ಬಗ್ಗೆ ಮುಂದೆ ಮಾತನಾಡಿದ ಸಾಕಿಬ್, “ಪಿಚ್ನಲ್ಲಿ ಚೆಂಡು ಗ್ರಿಪ್ ಆಗುತ್ತಿತ್ತು ಮತ್ತು ನಿಧಾನವಾಗಿ ಬರುತ್ತಿತ್ತು. ಹಾಗಾಗಿ ಸ್ಲೋ ಬಾಲ್ ಎಸೆಯುವುದು ನಮ್ಮ ಯೋಜನೆಯಾಗಿತ್ತು. ನಾನು ಇನ್ನೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ ಮತ್ತು ನನ್ನ 100 ಪ್ರತಿಶತ ಪ್ರಯತ್ನವನ್ನು ಹಾಕಲು ಇಷ್ಟಪಡುತ್ತೇನೆ” ಎಂದರು.
ಎಲಿಮಿನೇಟರ್ ಪಂದ್ಯ ಆಡಲಿರುವ ಎಸ್ ಆರ್ ಎಚ್
ಸನ್ರೈಸರ್ಸ್ ಹೈದರಾಬಾದ್ ಪಂದ್ಯವನ್ನಂತೂ ಗೆದ್ದಿತು, ಆದರೆ ಅವರಿಗೆ ಅಗತ್ಯವಿದ್ದಷ್ಟು ದೊಡ್ಡ ಮಾರ್ಜಿನ್ನ ಗೆಲುವು ಸಿಗಲಿಲ್ಲ. ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು 160 ರನ್ಗಳ ಒಳಗೆ ನಿಯಂತ್ರಿಸಿದ್ದರೆ ಟಾಪ್-2 ಸ್ಥಾನಕ್ಕೇರುತ್ತಿತ್ತು. ಏನೇ ಆದರೂ, ಪ್ಲೇಆಫ್ಗೂ ಮುನ್ನ ತಂಡದ ಪ್ರದರ್ಶನ ಮತ್ತು ಸಿಕ್ಕ ದೊಡ್ಡ ಗೆಲುವಿನಿಂದ ಎಸ್ ಆರ್ ಎಚ್ ಗೆ ಸಂತೋಷವಾಗಿದೆ. ಈಗ ಹೈದರಾಬಾದ್ ತಂಡವು ಮೇ 27 ರಂದು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಎದುರಾಳಿ ತಂಡ ಯಾವುದು ಎಂಬುದು ಇನ್ನು ಅಧಿಕೃತವಾಗಿ ಖಚಿತವಾಗಬೇಕಿದೆ. (ಏಜೆನ್ಸಿಸ್)



