ಮಂಗಳೂರು: ಕರಾವಳಿ ಭಾಗದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಮತ್ತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪೊಲೀಸರಿಗೆ ಕಾಲಿಗೆ ಗುಂಡು ಹಾರಿಸಿ ಎಂದು ನೀಡಿರುವ ಸೂಚನೆಯು ಇದೀಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಪೊಲೀಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಖಾದರ್, ನಗರದ ಕಾನೂನು ಸುವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿದರು. ರೌಡಿಶೀಟರ್ ಗಳು ಮತ್ತು ಹಳೇ ಅಪರಾಧಿಗಳು ಮತ್ತೆ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಕೊಂಡರೆ, ಅವರ ಕೈ-ಕಾಲಿಗೆ ಗುಂಡು ಹಾರಿಸುವ ಮೂಲಕ ಕಠಿಣ ಸಂದೇಶ ರವಾನಿಸಬೇಕೆಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಸಚಿವರು, ಹಿಂದಿನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಕಾರ್ಯಶೈಲಿಯನ್ನು ಶ್ಲಾಘಿಸಿದರು. “ಸಂದೀಪ್ ಪಾಟೀಲ್ ಅವರು ಕಮಿಷನರ್ ಆಗಿದ್ದಾಗ ರೌಡಿಗಳ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮ ಹಾಗೂ ಎನ್ಕೌಂಟರ್ನಂತಹ ಘಟನೆಗಳ ಭೀತಿಯಿಂದ ಕ್ರಿಮಿನಲ್ಗಳು ಬೆಚ್ಚಿಬಿದ್ದಿದ್ದರು. ಅಂತಹ ಕಠಿಣ ಮನೋಭಾವ ಪೊಲೀಸರಲ್ಲಿ ಮತ್ತೆ ಮೂಡಬೇಕು,” ಎಂದು ಸಚಿವರು ಪ್ರತಿಪಾದಿಸಿದ್ದಾರೆ.
ಕಾನೂನಿನ ಅಡೆತಡೆಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಅಪರಾಧ ಹತೋಟಿಗೆ ಇಂತಹ ಕಠಿಣ ಕ್ರಮಗಳು ಅನಿವಾರ್ಯ. ಕಾನೂನಿನ ತೊಡಕುಗಳು ಬರಬಹುದು ಎಂಬುದು ನಮಗೂ ತಿಳಿದಿದೆ, ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಇಂತಹ ಧೈರ್ಯದ ನಿರ್ಧಾರಗಳು ಅಗತ್ಯ,” ಎಂದು ಸಮರ್ಥಿಸಿಕೊಂಡಿದ್ದಾರೆ.



