ಪಿರಿಯಾಪಟ್ಟಣ: ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಸುಳ್ಳು ಆಪಾದನೆ ಮಾಡುತ್ತಿರುವ ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ನಡೆಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಖಂಡನೆ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಅಧ್ಯಕ್ಷ ಪುರುಷೋತ್ತಮ್ ಅವರು ಮಾತನಾಡಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ರಾಜಕೀಯವಾಗಿ ಅಶಾಂತಿ ಉಂಟುಮಾಡುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಎಳೆದು ತಂದು ಶೇರುದಾರರಿಂದ ಉದ್ದೇಶಪೂರ್ವಕವಾಗಿ ಪಕ್ಷಧಾರಿತ ಹೇಳಿಕೆಗಳನ್ನು ನೀಡಿಸಿ ಸಚಿವರು ಹಾಗೂ ಅವರ ಪುತ್ರ ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಸಿ ತೇಜೋವಧೆ ಮಾಡುತ್ತಿರುವುದು ಖಂಡನೀಯ, ಮಾಜಿ ಶಾಸಕ ಕೆ.ಮಹದೇವ್ ಅವರು ಚುನಾವಣೆಯಲ್ಲಿ ಸೋತ ಬಳಿಕ ತಾಲೂಕಿನಲ್ಲಿ ಗದ್ದಲದ ವಾತಾವರಣಕ್ಕೆ ಅವಕಾಶ ನೀಡುತ್ತಿರುವುದು ಖಂಡನಿಯ ಮುಂಬರುವ ದಿನಗಳಲ್ಲಿ ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ವತಿಯಿಂದ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯಿತನಹಳ್ಳಿ ಮಂಜು ಮಾತನಾಡಿ ರಾಜಕೀಯದಲ್ಲಿ ಸೋಲು ಗೆಲವು ಸಹಜ ಆದರೆ ಸೋತವರು ತಾಲೂಕಿನ ಅಭಿವೃದ್ಧಿ ದೃಷ್ಟಿಯಲ್ಲಿ ಗೆದ್ದವರಿಗೆ ಬೆಂಬಲ ಸೂಚಿಸಬೇಕೆ ಹೊರತು ದ್ವೇಷದ ರಾಜಕಾರಣಕ್ಕೆ ಮುಂದಾಗಬಾರದು, ಮಾಧ್ಯಮಗಳ ಮುಂದೆ ಸಚಿವರು ಹಾಗೂ ಅವರ ಪುತ್ರರಿಗೆ ನೀವು ಅವಹೇಳನಕಾರಿಯಾಗಿ ಮಾತನಾಡಬಹುದು ಅದನ್ನೆಲ್ಲ ತಾಲೂಕಿನ ಜನತೆ ವೀಕ್ಷಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ, ಊರು ಒಡೆದು ಗ್ರಾಮದ ಜನತೆಗಳ ಮಧ್ಯೆ ವಿಷ ಬೀಜ ಬಿತ್ತುವುದು ಮತ್ತು ಶಾಸಕರ ಹಾಗೂ ಸಚಿವರ ಗೌರವಕ್ಕೆ ಧಕ್ಕೆ ತರುವ ಯಾವುದೇ ಸುಳ್ಳನ್ನು ಮತ್ತೊಮ್ಮೆ ಹರಿಬಿಟ್ಟರೆ ನೀವು ಹೇಳಿದ ಹಾಗೆ ನಾವು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಯುವ ಮುಖಂಡರಾದ ಲೋಹಿತ್ ಪಂಚವಳ್ಳಿ, ಅಬ್ದುಲ್ ವಾಜಿದ್ ಇದ್ದರು.