ಮಂಗಳೂರು(ದಕ್ಷಿಣ ಕನ್ನಡ): ಹುಕ್ಕಾ ಬಾರ್ ಗಳಿಂದ ತೊಂದರೆ ಆಗುತ್ತಿದೆ. ಸಾರ್ವಜನಿಕರಿಗೆ ಅನಾರೋಗ್ಯ ಕಾಡುತ್ತಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಮಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಹುಕ್ಕಾ ಬಾರ್ ಗಳು ಬೇರೆ ಬೇರೆ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಅದರಲ್ಲಿ ಬೇರೆ ಮಿಶ್ರಣ ಮಾಡಿ ಹಾಕುವಂಥದ್ದು ಕಂಡುಬಂದಿದೆ. ಇಂಥದ್ದನ್ನ ನಿಯಂತ್ರಣ ಮಾಡೋದು ಬಹಳ ಕಷ್ಟ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಬಾರ್ ಇರಬಾರದು. ಬಾರ್, ರೆಸ್ಟೋರೆಂಟ್ ಗಳಲ್ಲಿ ಅದು ಇರಬಾರದು ಅನ್ನೋದು ವಿಚಾರದಲ್ಲಿ ಈ ಚಿಂತನೆ ಮಾಡಲಾಗಿದೆ ಎಂದರು.
ಇನ್ನು ಸಿ.ಟಿ.ರವಿ ಸೋತು ಸುಣ್ಣವಾಗಿದ್ದಾರೆ. ಅವರು ಸುಮ್ಮನಿದ್ದರೆ ಒಳ್ಳೆಯದು. ಅವರನ್ನು ವಿಧಾನಸಭೆಯಿಂದಲೂ ಜನ ಮನೆಗೆ ಕಳಿಸಿದ್ರು, ಪಕ್ಷದಲ್ಲೂ ದಿಲ್ಲಿಯಿಂದ ವಾಪಸ್ ಕಳುಹಿಸಿದ್ದಾರೆ. ಅನಾವಶ್ಯಕವಾಗಿ ಬಾಯಿ ತೆಗೆಯೋದು ಸರಿಯಲ್ಲ. ಅವರಿಗೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಅವರಿಗೆ ಸುದ್ದಿಯಲ್ಲಿ ಇರಬೇಕು ಅನ್ನೋ ಹವ್ಯಾಸ ಆಗಿದೆ ಎಂದು ಟೀಕಿಸಿದರು.
ಮೂವರು ಡಿಸಿಎಂ ಮಾಡಿದರೆ ತಪ್ಪೇನಿಲ್ಲ. ಆದರೆ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಬಹಿರಂಗ ಚರ್ಚೆ ಅಗತ್ಯ ಇಲ್ಲ ಎಂದರು.