ಮಂಗಳೂರು : ಬೆಂಗಳೂರಿನಲ್ಲಿ ಬರೆಯಬೇಕಾಗಿದ್ದ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಹೈಕೋರ್ಟ್ ಅನುಮತಿ ಮೇರೆಗೆ ಗರ್ಭಿಣಿ ಅಭ್ಯರ್ಥಿಯೊಬ್ಬರು ಮಂಗಳೂರಿನಲ್ಲಿ ಬರೆದಿದ್ದಾರೆ. ಎಂಟೂವರೆ ತಿಂಗಳ ಗರ್ಭಿಣಿಯಾಗಿರುವ ನ್ಯಾಯವಾದಿ ನೇತ್ರಾವತಿ ಅವರು ರಾಜ್ಯ ಹೈಕೋರ್ಟ್ನ ವಿಶೇಷ ಅನುಮತಿ ಪಡೆದು ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆಯನ್ನು ಮಂಗಳೂರು ನಗರದ ನ್ಯಾಯಾಲಯದ ಸಂಕೀರ್ಣದ ಕಟ್ಟಡದಲ್ಲಿ ಬರೆಯುತ್ತಿದ್ದಾರೆ. ಮೊದಲ ಪರೀಕ್ಷೆ ಬರೆದಿದ್ದರು.
ಇಂದು ಕೂಡ ಪರೀಕ್ಷೆಗೆ ಹಾಜರಾಗಿದ್ದಾರೆ. ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆಯು ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ನ್ಯಾಯವಾದಿ ನೇತ್ರಾವತಿ ಈ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು. ಆದರೆ, ಗರ್ಭಿಣಿಯಾಗಿದ್ದ ಕಾರಣ ಅವರಿಗೆ ಬೆಂಗಳೂರಿಗೆ ತೆರಳಿ ಪರೀಕ್ಷೆ ಬರೆಯಲು ಅಸಾಧ್ಯವಾಗಿತ್ತು. ಹೀಗಾಗಿ ಮಂಗಳೂರಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಂಬಂಧಿಸಿದ ಹೈಕೋರ್ಟ್ ನ ಸಮಿತಿಯು ಈ ಅರ್ಜಿಯನ್ನು ಪುರಸ್ಕರಿಸಿ ಅಭ್ಯರ್ಥಿಯ ಮನವಿಯಂತೆ ಮಂಗಳೂರಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು. ಅಲ್ಲದೇ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದ್ದರು.