ಚಾಮರಾಜನಗರ: ಜಿಲ್ಲೆಯಲ್ಲಿ ಜ. 26ರಂದು ಗಣರಾಜ್ಯೋತ್ಸವ ಹಾಗೂ ಸರ್ಕಾರದ ಆದೇಶ ಅನುಸಾರ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಗೆ ಅಗತ್ಯ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.
ಜ. 26ರಂದು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಂವಿಧಾನ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಸಮಾವೇಶಕ್ಕೆ ಜನವರಿ 26ರಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಮೂಲಕವೂ ಸಂವಿಧಾನ ಜಾಗೃತಿ ಜಾಥ ಸ್ತಬ್ದ ಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಭಾರತ ಸಂವಿಧಾನ ಮತ್ತು ಏಕತೆ ಕಾರ್ಯಕ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಸಂವಿಧಾನ ಜಾಗೃತಿ ಜಾಥಾ ಜಿಲ್ಲಾ ಕೇಂದ್ರದಿಂದ ಹೊರಡಲಿದೆ. ಸಂವಿಧಾನ ಮಹತ್ವ ಜಾಗೃತಿ ಕುರಿತ ವೀಡಿಯೋ ಕ್ಲಿಪ್ಪಿಂಗ್ಸ್ ಹೊಂದಿದ ಎಲ್.ಇ.ಡಿ ವಾಹನಗಳು ಸಹ ಜಿಲ್ಲಾ ಕೇಂದ್ರದಿಂದ ಹೊರಟು ಜಿಲ್ಲೆಯ ಗ್ರಾಮ ಪಂಚಾಯಿತಿಗಳನ್ನು ತಲುಪಲಿದೆ. ಸಂವಿಧಾನ ಪೀಠಿಕೆಯ ಪ್ರತಿಗಳನ್ನು ಮೆರವಣಿಗೆ ವೇಳೆ ವಿತರಿಸಲಾಗುತ್ತದೆ. ಈ ವಿಶೇಷ ಕಾರ್ಯಕ್ರಮವನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಮೆರವಣಿಗೆಯ ರಚನೆ, ಸಂಯೋಜನೆ, ಮಾರ್ಗಗಳು, ತಂಗುವಿಕೆ ಇನ್ನಿತರ ವಿಷಯಗಳನ್ನು ಜಿಲ್ಲಾ ಸಮಿತಿಯು ರೂಪಿಸಲಿದೆ. ಸಂವಿಧಾನ ಪೀಠಿಕೆ, ನ್ಯಾಯ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಕಲ್ಪನೆ, ಸ್ಥಳೀಯ ಕಲೆ, ಸಂಸ್ಕøತಿ, ಇನ್ನಿತರ ಮಹತ್ತರ ವಿಷಯಗಳು ಜಾಗೃತಿ ಸ್ತಬ್ದ ಚಿತ್ರದಲ್ಲಿ ಒಳಗೊಳ್ಳಲಿದೆ. ನಗರ ಹಾಗೂ ಗ್ರಾಮಗಳ ಮೂಲಕ ಮೆರವಣಿಗೆ ಸಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಂವಿಧಾನ ಸಂಬಂಧಿತ ವಿಷಯಗಳ ಕುರಿತ ಸ್ಪರ್ಧೆಗಳನ್ನು ಆಯೋಜಿಸಬೇಕು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ಬೆಂಬಲವನ್ನು ನಾಗರಿಕರು, ಸರ್ಕಾರೇತರ ಸಂಸ್ಥೆಗಳಿಂದ ಪಡೆಯಬೇಕು. ಭಾರತ ಸಂವಿಧಾನ ಮತ್ತು ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಅಧಿಕಾರಿಗಳು ತ್ವರಿತವಾಗಿ ಕಾರ್ಯೋನ್ಮುಖರಾಗಬೇಕು ಎಂದರು.
ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿಯಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳಬೇಕು. ಗಣರಾಜ್ಯೋತ್ಸವ ಸಂದರ್ಭದಲ್ಲಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಸಹ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೂ ವ್ಯವಸ್ಥಿತವಾಗಿ ಎಲ್ಲ ಕಾರ್ಯಗಳನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.