ಬೆಂಗಳೂರು : ಸುನೀಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಕ್ಕಳ ಸಿನಿಮಾ ‘ಮಕ್ಕಳ ಸೈನ್ಯ’ ಮೇ ೨೨ ರಂದು ತೆರೆಗೆ ಬರಲು ಸಜ್ಜಾಗಿದೆ.
ಈ ಚಿತ್ರ ಉತ್ತಮ ಸಂದೇಶವನ್ನು ಹೊಂದಿದ್ದು, ಪ್ರೇಕ್ಷಕರ ಗಮನ ಸೆಳೆಯಲಿದೆ. ೧೯೭೦ರಲ್ಲಿ ತೆರೆಕಂಡ ಸಿಂಹದ ಮರಿ ಸೈನ್ಯ ಚಿತ್ರದ ಬಳಿಕ ಮಕ್ಕಳ ಸಿನಿಮಾ ಬಂದಿರಲಿಲ್ಲ. ಮಕ್ಕಳ ಸೈನ್ಯ ಚಿತ್ರವು ಅದೇ ರೀತಿಯ ಕಥೆಯನ್ನು ಹೊಂದಿದ್ದು, ಸವಾಲಿಗೆ ಸವಾಲ್ ಎಂಬ ಅಡಿಬರಹವನ್ನು ಹೊಂದಿದೆ.
ಸ್ನೇಹ, ಸಾಹಸ, ತಂದೆ ಮಗಳ ಬಾಂಧವ್ಯ, ಸನಾತನ ಎಲ್ಲವನ್ನೂ ಈ ಸಿನಿಮಾ ಒಳಗೊಂಡಿದೆ. ಮೊದಲ ಬಾರಿಗೆ ಚಿತ್ರದಲ್ಲಿ ನಟಿಸುತ್ತಿರುವ ಮಕ್ಕಳು ಯಾವುದೇ ಭಯ, ಆತಂಕವಿಲ್ಲದೇ ಉತ್ತಮವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ.
ಮುಖ್ಯ ಪಾತ್ರದಲ್ಲಿ ರಘು ಸಮರ್ಥ ನಟಿಸಿದ್ದು, ಚಿತ್ರದಲ್ಲಿ ಮಕ್ಕಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಉಳಿದಂತೆ ಮಹಾಲಕ್ಷ್ಮೀ, ಗಗನ, ಸೋನಾಕ್ಷಿ, ಶಶಾಂಕ್, ರಾಬರ್ಟ್ ರುದ್ರಪ್ಪ ಮುಂತಾದವರು ನಟಿಸಿದ್ದಾರೆ.
ಚಿತ್ರದ ಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಸುನೀಲ್ ಕುಮಾರ್ ಬರೆದಿದ್ದಾರೆ. ಮುನಿಸ್ವಾಮಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಸಂಗೀತ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕ್ಕೆ ಹೆಸರಾಂತ ಸಾಹಿತಿ ದೊಡ್ಡರಂಗೇಗೌಡ ಗೀತರಚನೆ ಮಾಡಿದ್ದು, ಸನ್ನಿ ಜಿ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಶಿ ಮಾಸ್ಟರ್ ಮೈಸೂರು ನೃತ್ಯ ಸಂಯೋಜನೆ ಮಾಡಿದ್ದಾರೆ.



