ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣ ಸಮೀಪದಲ್ಲಿ ರೈಲಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರಿನ ಶಶಿಕುಮಾರ್, ಲೋಕೇಶ್ ಮೃತಪಟ್ಟವರು. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ ಎಂದು ರೈಲ್ವೆ ಎಸ್ಪಿ ಎಸ್.ಕೆ. ಸೌಮ್ಯಲತಾ ಹೇಳಿದರು.
‘ಕಣ್ಣೂರು ಎಕ್ಸ್ಪ್ರೆಸ್ ರೈಲು ಹೊರಟಿದ್ದ ಸಂದರ್ಭದಲ್ಲಿ ಮೂವರು ಯುವಕರು ಹಳಿ ಮೇಲಿದ್ದರು. ಮೂವರಿಗೂ ರೈಲು ಡಿಕ್ಕಿ ಹೊಡೆದಿದ್ದು, ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಮೂವರ ಮೃತದೇಹಗಳು ಪತ್ತೆಯಾಗಿವೆ’ ಎಂದರು ತಿಳಿಸಿದರು.
‘ಶಶಿಕುಮಾರ್, ಕೆಲಸ ಹುಡುಕಿಕೊಂಡು ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಲೋಕೇಶ್, ಕ್ಯಾಬ್ ಚಾಲಕನೆಂದು ಗೊತ್ತಾಗಿದೆ. ಇನ್ನೊಬ್ಬ ಯುವಕನ ಗುರುತು ಪತ್ತೆಯಾಗಿಲ್ಲ. ಮೂವರು ಯಾವ ಕಾರಣಕ್ಕೆ ಹಳಿ ಬಳಿ ಬಂದಿದ್ದರು. ಇದು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.