ಬೆಂಗಳೂರು: ರಾಜ್ಯದಲ್ಲಿ ಜಲ ಜೀವನ್ (ಜೆಜೆ) ಮಿಷನ್ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಥರ್ಡ್ ಪಾರ್ಟಿ ಆಡಿಟ್ ನ ಮಧ್ಯಂತರ ವರದಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಕಂಡುಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿಗೆ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಥರ್ಡ್ ಪಾರ್ಟಿ ಆಡಿಟ್ ನ ಮಧ್ಯಂತರ ವರದಿ ಬಂದಿದ್ದು, ಅಂತಿಮ ವರದಿ ಬಂದ ನಂತರ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದನದಲ್ಲಿ ಇರಿಸಲಾದ ಮಾಹಿತಿಯ ಪ್ರಕಾರ, ೨೦೧೯ ರಲ್ಲಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ೫೪.೩೯ ಲಕ್ಷ ಗ್ರಾಮೀಣ ಮನೆಗಳು ಟ್ಯಾಪ್ ನೀರಿನ ಸಂಪರ್ಕವನ್ನು ಪಡೆದಿವೆ. ಪ್ರಸ್ತುತ, ರಾಜ್ಯದ ಒಟ್ಟು ೧೦೧.೧೫ ಲಕ್ಷ ಗ್ರಾಮೀಣ ಮನೆಗಳಲ್ಲಿ ೭೮.೯೦ ಲಕ್ಷ ಮನೆಗಳು ನೀರಿನ ಸಂಪರ್ಕವನ್ನು ಹೊಂದಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು ೭೩,೪೩೪ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಅದರಲ್ಲಿ ೩೦,೮೧೩.೦೨ ಕೋಟಿ ರೂ.ಗಳನ್ನು ಟ್ಯಾಪ್ ನೀರಿನ ಸಂಪರ್ಕಕ್ಕಾಗಿ ಮತ್ತು ೪೨,೬೨೧.೩೮ ಕೋಟಿ ರೂ.ಗಳನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಲಾಗಿದೆ ಎಂದು ಅವರು ಹೇಳಿದರು.