ಬೆಂಗಳೂರು: ಇಡಿ ವಿಚಾರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳು ವಸ್ತುನಿಷ್ಠ ವರದಿ ನೀಡಬೇಕು, ಅದನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ. ಸುರೇಶ್ ಅವರಿಗೆ ಇಡಿ ನೋಟಿಸ್ ಬಂದಿದೆ. ನಮ್ಮ ಕುಟುಂಬ ಇಂಥ ವಿಚಾರಣೆಗಳಿಗೆ ಸದಾ ಸಿದ್ಧ. ಈ ಹಿಂದೆ ನನ್ನ ಮೇಲೂ ಇಡಿ ಕೇಸ್ ದಾಖಲಾಗಿತ್ತು. ಕೊನೆಗೆ ನ್ಯಾಯಾಲಯವೇ ನಮ್ಮ ರಕ್ಷಣೆ ಮಾಡಿತು,” ಎಂದರು.
ಸುರೇಶ್ ಇಡಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದ ಶಿವಕುಮಾರ್, “ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರನ್ನು ಭೇಟಿಯಾದರೆ ಅದು ಸಹಜ” ಎಂದರು.
ಬಿ.ಆರ್. ಪಾಟೀಲ್ ಆರೋಪದ ಬಗ್ಗೆ, “ಈ ಕುರಿತು ನಾನು ಹೇಳಬೇಕಾದುದನ್ನು ಈಗಾಗಲೇ ಹೇಳಿದ್ದೇನೆ. ಮುಂದಿನ ಸ್ಪಷ್ಟನೆ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರು ನೀಡುತ್ತಾರೆ,” ಎಂದರು.
ಅನುದಾನ ಹಂಚಿಕೆಯಲ್ಲಿ ಶಾಸಕರ ಗಮನಕ್ಕೆ ಬಾರದೇ ಹಣ ತೆಗೆದುಕೊಂಡ ಪ್ರಕರಣದ ಬಗ್ಗೆ ಅವರಿಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.