ಬೆಂಗಳೂರು: ನಾಲ್ಕು ತಿಂಗಳಿಂದ ಪಡಿತರ ಆಹಾರ ಧಾನ್ಯ ಸಾಗಣಿಕೆ ವೆಚ್ಚ ನೀಡದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ವಿರುದ್ದ ಪಡಿತರ ಲಾರಿ ಮಾಲೀಕರು, ಚಾಲಕರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿದ್ದಾರೆ.
ನಾಲ್ಕು ತಿಂಗಳಿಂದ ಪಡಿತರ ಆಹಾರ ಧಾನ್ಯ ಸಾಗಣಿಕೆ ವೆಚ್ಚ 260 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಲಾರಿ ಮಾಲೀಕರು, ಚಾಲಕರು ಇಂದಿನಿಂದ ಮುಷ್ಕರ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಈ ತಿಂಗಳ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ 15ದಿನಗಳ ಗಡುವು ನೀಡಲಾಗಿತ್ತು. ಆದರೆ ಸರ್ಕಾರ ಪಾವತಿ ಮಾಡದ ಹಿನ್ನೆಲೆಯಲ್ಲಿ ಪಡಿತರ ಲಾರಿ ಮಾಲೀಕರು ಚಾಲಕರು ಅಕ್ಕಿ ಸಾಗಾಣೆ ಮಾಡುವುದನ್ನ ಬಂದ್ ಮಾಡಿದ್ದಾರೆ. ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಗೋದಾಮು ಮುಂದೆ ಲಾರಿ ನಿಲ್ಲಿಸಿ ಮುಷ್ಕರ ಹೂಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ವಿ.ಆರ್.ಷಣ್ಮುಗಪ್ಪ, ಯಾವುದೇ ಭರವಸೆ ಈಡೇರಿಸದ ಹಿನ್ನೆಲೆ ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್ ಎಂದಿದ್ದಾರೆ. ನಮ್ಮ ಖಾತೆಗೆ ಹಣ ಬರುವವರೆಗೂ ಮುಷ್ಕರ ಹಿಂಪಡೆಯಲ್ಲ ಎಂದು ಹೇಳಿದ್ದಾರೆ.
5 ತಿಂಗಳಿನಿಂದ 260 ಕೋಟಿ ರೂ. ಬಿಡುಗಡೆ ಆಗಬೇಕು. ಜೂ.19ರಂದು 100 ಕೋಟಿ ರೂ. ಹಾಕುವುದಾಗಿ ಹೇಳಿದ್ದರು. ಆದರೆ ಈವರೆಗೂ 1 ರೂ. ಹಣ ಬಂದಿಲ್ಲ ನಮ್ಮ ಖಾತೆಗೆ. ಆಹಾರ ಸಚಿವರು, ಅಧಿಕಾರಿಗಳು ಮಾತುಕತೆಗೆ ಕರೆದಿಲ್ಲ, ಹಾಗಾಗಿ ಇಂದಿನಿಂದ ಮುಷ್ಕರ ಮಾಡಲು ಮುಂದಾಗಿದ್ದೇವೆ. ಹಣ ಬಂದ ಮೇಲೆ ನಾವು ಅಕ್ಕಿ ಸರಬರಾಜು ಮಾಡಲು ಮುಂದಾಗುತ್ತೇವೆ ಎಂದಿದ್ದಾರೆ.