ನವದೆಹಲಿ : 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ . ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ನವೆಂಬರ್ ಕ್ರಾಂತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾಯಕತ್ವ ಬದಲಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ನಾನು ಹೇಳಿದ್ದೇವಾ ಎಂದು ಪ್ರಶ್ನಿಸಿದ್ದಾರೆ.
5 ವರ್ಷ ಆಗಲಿ, 10 ವರ್ಷ ಆಗಲಿ , 15 ವರ್ಷ ಆಗಲಿ. ನಾಯಕತ್ವದ ಬಗ್ಗೆ ಹೈಕಮಾಂಡ್ ಹೇಗೆ ಹೇಳಲಿದೆಯೋ ಹಾಗೆ ನಾವು ನಡೆದುಕೊಳ್ಳುತ್ತೇವೆ. ಪಕ್ಷದ ಚೌಕಟ್ಟು ಬಿಟ್ಟು ನಾನು ಎಂದೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತೇನೆ. ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಪಥಸಂಚಲನ ಕುರಿತು ಮಾತನಾಡಿ, ಆರ್ ಎಸ್ ಎಸ್ ಆಗಲಿ ಅಥವಾ ಯಾರೇ ಆಗಲಿ ಅನುಮತಿ ತೆಗೆದುಕೊಂಡು ಕಾರ್ಯಕ್ರಮ ಮಾಡಲಿ ಎಂದು ಹೇಳಿದ್ದೆವು. ಜಗದೀಶ್ ಶೆಟ್ಟರ್ ಮಾಡಿದ ಆದೇಶಕ್ಕೆ ಬದ್ಧ ಎಂದು ಹೇಳಿದ್ದೆವು. ಹೈಕೋರ್ಟ್ನಲ್ಲಿ ಏನಾಗಿದೆ ಎಂಬುದನ್ನು ನಮ್ಮ ಕಾನೂನು ತಂಡ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ವೋಟ್ ಚೋರಿ ವಿಚಾರಕ್ಕೆ ಸಂಬಂಧಿಸಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ವರದಿ ನೀಡಲು ಸೂಚಿಸಿದ್ದೆ. ಸಹಿ ಅಭಿಯಾನದ ಬಗ್ಗೆ ವರದಿ ನೀಡಲು ಕೇಳಿದ್ದೆ. ನ.9ರೊಳಗೆ ವರದಿ ನೀಡಬೇಕು. ಕೊಡದಿದ್ದರೆ ನಾವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ದಯೆ ಇಲ್ಲದೇ ಅವರನ್ನು ಕಿತ್ತು ಹಾಕುತ್ತೇನೆ. ಶಾಸಕರ ಬಗ್ಗೆ ಸಿಎಂ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೇ ಮುಲಾಜಿಲ್ಲದೇ ನಾನು ಹೈಕಮಾಂಡ್ ಗೆ ವರದಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.



