ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ಭಾರತ ನೌಕಾ ಪಡೆಯ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಉಡುಪಿಯ ಕೊಚ್ಚಿನ್ ಶಿಪ್ಯಾರ್ಡ್ನ ಇಬ್ಬರು ನೌಕರರನ್ನು ಬಂಧಿಸಲಾಗಿತ್ತು. ಇದೀಗ ಅವರಿಗೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಬಂಧಿತ ಆರೋಪಿಯನ್ನು ಗುಜರಾತ್ನ ಆನಂದ್, ತಾಲೂಕಿನ ಕೈಲಾಸ್ ನಗರಿ ನಿವಾಸಿ ಹೀರೇಂದ್ರ ಕುಮಾರ್ ಖಡಯಾತ್(34) ಎಂದು ಗುರುತಿಸಲಾಗಿದೆ.
ಈತ ಕೂಡ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಉದ್ಯೋಗಿಯಾಗಿದ್ದು ಎರಡು ವಾರಗಳ ಹಿಂದೆ ಮಲ್ಪೆಯ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರು ಇಲ್ಲಿಗೆ ದುರಸ್ತಿಗೆ ಬರುತ್ತಿದ್ದ ಭಾರತೀಯ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್ ಮತ್ತಿತರ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಈ ಹಿನ್ನಲೆ ಆರೋಪಿ ರೋಹಿತ್ ಯುಪಿಯ ಸುಲ್ತಾನ್ಪುರ ಜಿಲ್ಲೆಯನಾಗಿದ್ದು, ಮತ್ತೋರ್ವ ಸಂತ್ರಿ ಸುಲ್ತಾನ್ಪುರದ ಹಂಜಾಬಾದ್ ಮೈದಾನ್ ನಿವಾಸಿ. ಇಬ್ಬರೂ ಮಲ್ಪೆಯ ಸುಷ್ಮಾ ಮರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಉದ್ಯೋಗಿಗಳಾಗಿದ್ದಾರೆ. ಮಲ್ಪೆಯ ಶಿಪ್ ಯಾರ್ಡ್ನಲ್ಲಿ ರೋಹಿತ್ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದ, ಮತ್ತೋರ್ವ ಆರೋಪಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನೂ ವಾಟ್ಸ್ಆ್ಯಪ್ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ವಿಚಾರಣೆ ವೇಳೆ ಈ ಆರೋಪಿಗಳಿಗೆ ನೀಡಿದ ಮಾಹಿತಿಯಂತೆ ಅವರಿಗೆ ಸಿಮ್ಗಳನ್ನು ಒದಗಿಸುತ್ತಿದ್ದ ಹೀರೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಅನೇಕ ಮಂದಿ ಶಾಮೀಲಾಗಿರುವ ಸಂಶಯಗಳಿದ್ದು, ಪೊಲೀಸರು ತಲಾಶ್ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.



