ಕೊಪ್ಪಳ : ಕಳೆದ ಕೆಲ ದಿನಗಳಿಂದ ಬಲ್ಡೋಟಾ ಸ್ಟೀಲ್ ಫವರ್ ಲಿಮಿಟಿಡ್ ಹೆಸರು ಬಹಳ ಚರ್ಚೆಯಲ್ಲಿದೆ. ಜಿಲ್ಲೆಯಲ್ಲಿ ವಿಸ್ತರಣೆಯಾಗಿರುವ ಈ ಕಾರ್ಖಾನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿದ್ದು, ಒಂದು ಕಡೆ ವಾಯು ಮಾಲಿನ್ಯ ಕಡಿಮೆ ಮಾಡಲು ಶಾಸಕರು, ಮಾಜಿ ಸಂಸದರು ಸಭೆ ಮಾಡಿದ್ದರೆ, ಮತ್ತೊಂದು ಕಡೆ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಘವೇಂದ್ರ ಹಿಟ್ನಾಳ್, ತಂತ್ರಜ್ಞಾನ ಬಳಸಿಕೊಂಡು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ನೂರಕ್ಕೆ ನೂರರಷ್ಟು ಕಾರ್ಖಾನೆ ಬಂದ್ ಮಾಡಿಸೋದು ನಿಶ್ಚಿತ ಎಂದು ಹೇಳಿದ್ದಾರೆ.
ಮುಂದುವರೆದು, ಕೊಪ್ಪಳದಿಂದ ಕೂಗಳತೇ ದೂರದಲ್ಲಿರುವ ಗಿಣಗೇರಾ ಬಳಿ ಇರುವ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿದ್ದು, ಬೆಳಗಿನ ಸಮಯದಲ್ಲಿ ಕಾರ್ಖಾನೆಗಳಿಂದ ಹೊರ ಹೋಗುವ ಅಪಾರ ಪ್ರಮಾಣದ ಹೊಗೆಗೆ ಜನರು ರೋಸಿ ಹೋಗಿದ್ದಾರೆ. ಹೊಗೆ ಕಡಿಮೆ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನು ಇತ್ತೀಚಿಗೆ ಹಿರೇಬಗನಾಳ ಗ್ರಾಮಕ್ಕೆ ಹೋಗಿದ್ದ ವೇಳೆ ಧೂಳಿನ ಸಮಸ್ಯೆ ಬಗ್ಗೆ ಗ್ರಾಮದ ಯುವಕರು ಹೇಳಿಕೊಂಡಿದ್ದರು. ಈ ವೇಳೆ ಸಮಸ್ಯೆ ಆಲಿಸದೇ ಶಾಸಕ ಹಿಟ್ನಾಳ್ ವಾಪಸ್ ಹೋಗಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೇ ಇಂದು ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಹಿಟ್ನಾಳ್, ಗ್ರಾಮದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಇಲ್ಲಿ ನಾವು ಹೇಗೆ ಜೀವನ ಮಾಡಬೇಕು. ಗ್ರಾಮ ಸ್ಥಳಾಂತರ ಮಾಡುವಂತೆ ಗ್ರಾಮದ ಮಹಿಳೆಯ ಒತ್ತಾಯಿಸಿದ್ದಾರೆ.
ಬಳಿಕ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ತಂತ್ರಜ್ಞಾನ ಬಳಸಿಕೊಂಡು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ನೂರಕ್ಕೆ ನೂರರಷ್ಟು ಕಾರ್ಖಾನೆ ಬಂದ್ ಮಾಡಿಸೋದು ನಿಶ್ಚಿತ ಎಂದರಲ್ಲದೆ, ನಾನು ಮತ್ತೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಡಿಸಿ ಕೂಡ ಬರುತ್ತಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬರುತ್ತಾರೆ. ಕಾರ್ಖಾನೆ ಯಾರದ್ದಾದರೂ ಆಗಿರಲಿ ನಮಗೆ ಆರೋಗ್ಯ ಮುಖ್ಯ.
ಮಾಲಿನ್ಯ ತಡೆ ಸಂಬಂಧ ತಜ್ಞರನ್ನ ಕರೆಸಿ ಚರ್ಚಿಸಲು ಚಿಂತನೆ ನಡೆಸಿದ್ದೇವೆ. ಮಧ್ಯಪ್ರದೇಶದ ಭೋಪಾಲ್ ನಗರದಲ್ಲೇ ಕಾರ್ಖಾನೆ ಇದೆ. ಅಲ್ಲಿ ಯಾವ ರೀತಿ ಕ್ರಮ ಇದೆಯೋ ಇಲ್ಲೂ ಅದೇ ರೀತಿ ಆಗಲಿ. ಕಿರ್ಲೋಸ್ಕರ್ ಕಾರ್ಖಾನೆಯಿಂದ ನಮ್ಮ ಮನೆ 2 ಕಿ.ಮೀ.ದೂರದಲ್ಲಿದೆ. ಅಲ್ಲಿ ಧೂಳು ಬರಲ್ಲ, ಆ ತರಹದ ತಂತ್ರಜ್ಞಾನ ಇಲ್ಲೂ ಬಳಸಲಿ ಎಂದು ಹೇಳಿದ್ದಾರೆ.



