ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿ ಸಂಜಯ್ ರಾಯ್ನನ್ನು ನ್ಯಾಯಾಲಯವು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಸಂಜಯ್ನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಸೀಲ್ದಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಕ್ಕೆ ಕರೆತರಲಾಯಿತು. ಆರೋಪಿ ಸಂಜಯ್ ರಾಯ್ ನ ಸಿಬಿಐ ಕಸ್ಟಡಿ ಇಂದು ಅಂತ್ಯಗೊಂಡ ಬೆನ್ನಲ್ಲೇ ಆರೋಪಿಗೆ ೧೪ ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಪ್ರತ್ಯೇಕವಾಗಿ, ಕೋಲ್ಕತ್ತಾದ ವಿಶೇಷ ನ್ಯಾಯಾಲಯವು ಆರೋಪಿಯ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಲು ಸಿಬಿಐಗೆ ಅನುಮತಿ ನೀಡಿತು.
ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿ ಸಂಜಯ್ ರಾಯ್ನದ್ದು ಕ್ರೂರ ಪ್ರಾಣಿಯ ಮನಸ್ಥಿತಿ, ಆತನಿಗೆ ಪಶ್ಚಾತಾಪವೂ ಇಲ್ಲ. ಆತ ನಿತ್ಯವೂ ತನ್ನ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿರುತ್ತಿದ್ದ. ಪ್ರಾಣಿಯ ಪ್ರವೃತ್ತಿಯನ್ನು ಹೊಂದಿದ್ದ ಆತನಿಗೆ ತಾನು ಮಾಡಿರುವ ಕೃತ್ಯದ ಬಗ್ಗೆ ಪಶ್ಚಾತಾಪ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸಿಬಿಐ ಆಗಸ್ಟ್ 18ರಂದು ಸಂಜಯ್ ರಾಯ್ ಮನಸ್ಥಿತಿಯನ್ನು ತಿಳಿದುಕೊಳ್ಳಲು ಸಿಎಫ್ಎಸ್ಎಲ್ ತಜ್ಞರಿಗೆ ಹೇಳಿದ್ದರು. ಆಗಸ್ಟ್ 9 ರಂದು ಸರ್ಕಾರಿ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯರ ಶವ ಪತ್ತೆಯಾದ ಮರುದಿನ ಬಂಧಿಸಲಾಗಿತ್ತು.