ಕೊಪ್ಪಳ: ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕಾಂಕ್ರಿಟ್ ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಮಹೆಬೂಬ ನಗರದ 7ನೇ ವಾರ್ಡ್ನ 11ನೇ ಅಂಗನವಾಡಿ ಕೇಂದ್ರದಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ನಾಲ್ಕರಿಂದ ಐದು ವರ್ಷದೊಳಗಿನ ಅಮಾನ್ ಸೈಯದ್, ಮರ್ದಾನ್, ಮಾನ್ವಿತಾ, ಸುರಕ್ಷಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಸ್ಥಳೀಯರು ತಕ್ಷಣ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಕಳೆದ ಮೂರು ದಿನಗಳ ರಜೆಯ ಬಳಿಕ ಇಂದು ಎಂದಿನಂತೆ ಅಂಗನವಾಡಿ ಕೇಂದ್ರ ಆರಂಭವಾಗಿದೆ. ಕೇಂದ್ರದ ಶಿಕ್ಷಕಿ ಹಸೀನಾ ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ. ಘಟನೆ ನಡೆದ ಸ್ಥಳಕ್ಕೆ ನಗರಸಭೆಯ ಅಧ್ಯಕ್ಷ ಮೌಲಸಾಬ್, ವಾರ್ಡ್ ಸದಸ್ಯ ಮನೋಹರಸ್ವಾಮಿ, ಸಿಡಿಪಿಒ ಜಯಶ್ರೀ ದೇಸಾಯಿ, ಸೂಪರ್ವೈಸರ್ ಚಂದ್ರಮ್ಮ ಸೇರಿದಂತೆ ನಗರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.