ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ತಲಘಟ್ಟಪುರದಲ್ಲಿ ಸಂಭವಿಸಿದ ಈ ದಾರುಣ ಘಟನೆಯು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸಾಂಬಾರ್ ಮಾಡುವುದು ಹೇಗೆ ಎಂಬುದರ ಕುರಿತು ಉಂಟಾದ ಸಣ್ಣ ಜಗಳದ ಪರಿಣಾಮವಾಗಿ ಸ್ನೇಹಿತನೇ ಸ್ನೇಹಿತನನ್ನು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ನೇಪಾಳ ಮೂಲದ ಬಹದ್ದೂರ್ ಎಂದು ಗುರುತಿಸಲಾಗಿದೆ. ಆರೋಪಿ ಮಹೇಂದ್ರ ಎಂಬವನಾಗಿದ್ದು, ಇಬ್ಬರೂ ಸ್ನೇಹಿತರು ಹಾಗೂ ರೂಮ್ಮೇಟ್ಗಳಾಗಿದ್ದರು. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜೂನ್ 22ರ ರಾತ್ರಿ ತಮ್ಮ ರೂಮಿನಲ್ಲಿ ಸಾಂಬಾರ್ ಮಾಡುವ ವಿಧಾನವನ್ನೇ ಕುರಿತಂತೆ ಚರ್ಚೆ ಆರಂಭಿಸಿದ್ದರು. ಈ ಚರ್ಚೆ ವಾದವಿವಾದಕ್ಕೆ ತಿರುಗಿ, ತೀವ್ರ ಗಲಾಟೆಗೆ ತಲುಪಿದೆ.
ಗಲಾಟೆ ತಾರಕಕ್ಕೆ ತಲುಪಿದಾಗ ಮಹೇಂದ್ರ ತನ್ನ ಆಕ್ರೋಶವನ್ನು ನಿಯಂತ್ರಿಸಲು ವಿಫಲನಾಗಿ, ಬಹದ್ದೂರ್ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಬಹದ್ದೂರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಮೃತ ಬಹದ್ದೂರ್ ನಗರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡಾಗಿ ಕೆಲಸ ಮಾಡುತ್ತಿದ್ದನು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದನು.
ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.